ಕುಂದಾಪುರ : ಸರ್ಕಾರದಿಂದ ಜಾರಿಗೆ ಬಂದಿರುವ ಯೋಜನೆಗಳ ಅನುಷ್ಠಾನ ಹೇಗಾಗುತ್ತಿದೆ ಎನ್ನುವುದನ್ನು ಕೂಲಂಕೂಷವಾಗಿ ಅರಿತುಕೊಳ್ಳಲು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ವಂಡ್ಸೆ, ಸಿದ್ದಾಪುರ ಹಾಗೂ ಕಂಡ್ಲೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿದ ಶಾಸಕರು ಕೇಂದ್ರ ವ್ಯಾಪ್ತಿಯಲ್ಲಿ ಕೊರೊನಾ ಕಾರಣಕ್ಕಾಗಿ ಮನೆಯಲ್ಲಿ ಆರೈಕೆ ಮಾಡಿಕೊಳ್ಳುತ್ತಿರುವವರ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವವರ ವಿವರ ಪಡೆದುಕೊಂಡರು.
ಮನೆಯಲ್ಲಿ ಆರೈಕೆ ( ಹೋಂ ಐಸೋಲೇಶನ್ ) ಪಡೆದುಕೊಳ್ಳುತ್ತಿರುವವ ಯೋಗ ಕ್ಷೇಮ ವಿಚಾರಣೆ ಮಾಡಲು ಗ್ರಾಮ ಸಮಿತಿ ಟಾಸ್ಕ್ ಪೋರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಆರೋಗ್ಯ ರಕ್ಷಣೆ ಹಾಗೂ ಔಷಧಿ ಸೇವನೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆಯೇ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡರು. ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ವೈದ್ಯಕೀಯ ಮಾರ್ಗದರ್ಶನ ನೀಡಿ, ಬೇರೆಯವರಿಗೆ ಸೋಂಕು ವಿಸ್ತರಣೆಯಾಗದಂತೆ ಎಚ್ಚರಿಕೆ ವಹಿಸುವಂತೆಯೂ ಶಾಸಕರು ಸಲಹೆ ನೀಡಿದರು.
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ಕುಮಾರ ಶೆಟ್ಟಿ ಶಾಸಕರ ಪ್ರಾಥಮಿಕ ಆರೋಗ್ಯ ಕೇಂದ್ರದ ಭೇಟಿ ವೇಳೆ ಜೊತೆಗಿದ್ದರು. ಭೇಟಿಯ ವೇಳೆ ದಾನಿಗಳು ನೀಡಿದ ವೈದ್ಯಕೀಯ ನೆರವಿನ ವಸ್ತುಗಳನ್ನು ಆರೋಗ್ಯ ಕೇಂದ್ರಗಳಿಗೆ ಹಸ್ತಾಂತರಿಸಲಾಯಿತು.