ವರದಿ: ಶಫೀ ಉಚ್ಚಿಲ
ಕಾಪು : ಕಳೆದ ವಾರ ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯ ಕಾಡಿಪಟ್ಣ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದ ಟಗ್ ತೆರವಿಗೆ ಮಂಗಳೂರಿನ ತಜ್ಞರ ತಂಡದಿಂದ ಬೇಕಾದ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ತೆರವು ಬುಧವಾರ ಕಾರ್ಯಾಚರಣೆ ಆರಂಭಗೊಂಡಿದೆ.
ಎಮ್ಆರ್ಪಿಎಲ್ ಕ್ರೂಡ್ ಆಯಿಲ್ ಜೆಟ್ಟಿಗಾಗಿ ಗುತ್ತಿಗೆ ಆಧಾರದಲ್ಲಿ ನಿಯುಕ್ತಿಗೊಂಡಿದ್ದ ಗುಜರಾತ್ ಮೂಲದ ಅಲಯನ್ಸ್ಗೆ ಸೇರಿದ ಈ ಟಗ್ ನವಮಂಗಳೂರು ಬಂದರು ಬಳಿ 4 ನಾಟಿಕಲ್ ದೂರದಲ್ಲಿ ಚಂಡುಮಾರುತ ಪ್ರಭಾವಕ್ಕೆ ಸಿಲುಕಿ ಪಡುಬಿದ್ರಿ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು.ಸಮುದ್ರದಲ್ಲಿ ಮುಳುಗಿರುವ ಟಗ್ಗನ್ನು ಮಂಗಳೂರಿನ ಬಿಲಾಲ್ ಮೊಯ್ದಿನ್ ನೇತೃತ್ವದ ಬದ್ರಿಯಾ ತಜ್ಞರ ತಂಡ ತೆರವು
ಕಾರ್ಯಾಚರಣೆ ವಹಿಸಿಕೊಂಡಿದೆ.
ಈ ಟಗ್ 1000 ಲೀ ನಷ್ಟು ಡೀಸೆಲ್ ತುಂಬಿಸುವ ಸಾಮರ್ಥ್ಯ ಇದೆ. ಕಳೆದ ನಾಲ್ಕು ದಿನಗಳಿಂದ ಟಗ್ನಲ್ಲಿದ್ದ ಅಲ್ಪಸ್ವಲ್ಪ ಡೀಸಿಲ್ ಹೊರ ಚೆಲ್ಲಿದ್ದು, ಸಮುದ್ರ ತೀರದಲ್ಲಿ ವಾಸನೆಯುಕ್ತವಾಗಿ ಕಂಡುಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಮಾಹಿತಿ ನೀಡಿದ್ದಾರೆ.
ಡೀಸಿಲ್ ಹೊರ ಚೆಲ್ಲದಂತೆ ಎಮ್ಆರ್ಪಿಲ್ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಡೀಸಿಲ್ ಹೊರ ಚೆಲ್ಲಿದರೆ ಅತೀ ಸೂಕ್ಷ್ಮ ಜೀವಿಗಳಾದ ತೀರದ ಮೀನುಗಳಿಗೆ ಅಪಾಯವಿದೆ,ಬಗ್ಗೆ ಹೆಚ್ಚು ನಿಗಾ ವಹಿಸುವಂತೆ ಅವರು ತಿಳಿಸಿದ್ದಾರೆ.