ಬೆಂಗಳೂರು : ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಂ.ಉದಾಸಿ ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಎಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೆಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ.
ಸಿ.ಎಂ.ಉದಾಸಿ ಮೊದಲ ಬಾರಿಗೆ 1983 ರಲ್ಲಿ ವಿಧಾನಸಭೆಗೆ ಪಕ್ಷೇತರರಾಗಿ ಪ್ರವೇಶಿಸಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಗೆಲುವು ಪಡೆದಿದ್ದ ಅವರು 1994 ರಲ್ಲಿ ಜನತಾದಳದಿಂದ ಆಯ್ಕೆಯಾಗಿದ್ದರು. ಆನಂತರ ಬಿಜೆಪಿ ಸೇರಿ 2004, 2008 ಮತ್ತು 2018ರಲ್ಲಿ ಗೆದ್ದಿದ್ದರು. ಲೋಕೋಪಯೋಗಿ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಸಿಎಂ ಯಡಿಯೂರಪ್ಪ ಸಂತಾಪ
![](http://diksoochinews.com/wp-content/uploads/2023/10/diksoochi_inline.jpeg)
ಉದಾಸಿ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. “ಹಾನಗಲ್ ಕ್ಷೇತ್ರದ ಶಾಸಕರು,ಮಾಜಿ ಸಚಿವರು, ನನ್ನ ದಶಕಗಳ ಒಡನಾಡಿ, ಆತ್ಮೀಯರಾದ ಸಿ.ಎಂ.ಉದಾಸಿ ಇನ್ನಿಲ್ಲ ಎನ್ನುವ ಸುದ್ದಿ ಅತೀವ ಆಘಾತವನ್ನು ಉಂಟುಮಾಡಿದೆ. ನನ್ನ ರಾಜಕೀಯ ಜೀವನದುದ್ದಕ್ಕೂ ಜೊತೆಗಿದ್ದು, ಏಳುಬೀಳುಗಳನ್ನು ಜೊತೆಯಾಗಿ ಎದುರಿಸಿದ್ದೆವು. ಇಂದು ಅವರು ನಮ್ಮಿಂದ ದೂರವಾಗಿರುವುದು, ನನ್ನ ಸಹೋದರನನ್ನು ನಾನು ಕಳೆದುಕೊಂಡಂತಾಗಿದೆ.
ಅವರ ಆತ್ಮಕ್ಕೆ ದೇವರು ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರು, ಬಂಧುಗಳು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೋರುತ್ತಾ, ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಬಸವರಾಜ್ ಬೊಮ್ಮಾಯಿ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
![](http://diksoochinews.com/wp-content/uploads/2023/10/diksoochi_inline.jpeg)