ಉಡುಪಿ : ಜಿಲ್ಲೆಯಲ್ಲಿ ಜಿಲ್ಲಾಡಳಿತವು ಆರೋಗ್ಯ ಇಲಾಖೆ, ಗ್ರಾ.ಪಂ. ಟಾಸ್ಕ್ ಪೋರ್ಸ್ ಗಳ ಮತ್ತು ಸಾರ್ವಜನಿಕರ ಸತತ ಸಹಕಾರದಿಂದ ಕೋವಿಡ್ ಮಹಾಮಾರಿ ನಿಯಂತ್ರಿಸುವಲ್ಲಿ ಗಣನೀಯ ಯಶಸ್ಸನ್ನು ಕಂಡಿದ್ದು, ಕೋವಿಡ್ ಪಾಸಿಟಿವಿಟಿ ಪ್ರಕರಣಗಳು ತೀವ್ರಗತಿಯಲ್ಲಿ ಇಳಿಮುಖ ಕಂಡಿದೆ. ಅದರ ಫಲಶೃತಿಯಾಗಿ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿದಿದ್ದರೂ ನಮ್ಮ ಜಿಲ್ಲೆಯಲ್ಲಿ ಹಲವಾರು ವಿನಾಯಿತಿಗಳನ್ನು ಘೋಷಿಸಲಾಗಿದೆ. ಕೈಗಾರಿಕೆಗಳನ್ನು ನಡೆಸಲು ಅನುಮತಿಸಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳ ಸಮಯವನ್ನು ಮಧ್ಯಾಹ್ನ 2 ಗಂಟೆಯ ವರೆಗೆ ವಿಸ್ತರಿಸಲಾಗಿದೆ ಹಾಗೂ ಮದುವೆ ಕಾರ್ಯಕ್ರಮವನ್ನು ಮಾತ್ರ ಅವರವರ ಮನೆಯಲ್ಲಿ ಗರಿಷ್ಠ 40 ಜನರ ಮಿತಿಗೊಳಪಟ್ಟು ನಡೆಸಲು ಅನುಮತಿಸಿದೆ.
ಈ ನಡುವೆ ಅನೇಕ ಸಂಘ-ಸಂಸ್ಥೆಗಳು ಸನ್ಮಾನ ಹಾಗೂ ಇತರೆ ಕಾರ್ಯ ಆಯೋಜಿಸುತ್ತಿರುವುದು ಗಮನಿಸಲಾಗಿದೆ. ಇವು ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಅಲ್ಲದೇ, ಕೋವಿಡ್ ಪ್ರಕರಣಗಳ ಪ್ರಸರಣಕ್ಕೆ ಕಾರಣವಾಗಿ ಈ ವರೆಗೆ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಪ್ರಕರಣಗಳಲ್ಲಿ ಏರಿಕೆಯಾಗುವ ಸಂಭವವಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಆದುದರಿಂದ ಸಂಘ-ಸಂಸ್ಥೆಗಳು\ಸಾರ್ವಜನಿಕರು ಯಾವುದೇ ಸನ್ಮಾನದಂತಹ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಕೋರಲಾಗಿದೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಲು ವಿನಂತಿಸಿದೆ. ಆಹಾರ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಮುಂತಾದ ವೈದ್ಯಕೀಯ ಪರಿಕರಗಳನ್ನು ವಿತರಿಸುವ ಸಂಘ ಸಂಸ್ಥೆಗಳು ಯಾವುದೇ ಸಭೆ/ಸಮಾರಂಭಗಳನ್ನು ಆಯೋಜಿಸದೇ ಅವುಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡುವುದರ ಮುಖಾಂತರ ಸಹಕರಿಸಲು ಕೋರಿದೆ.
ಇನ್ನು ಮುಂದೆ ಯಾವುದೇ ಸಂಘ – ಸಂಸ್ಥೆಗಳು/ಸಾರ್ವಜನಿಕರು ಸನ್ಮಾನ ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.