ಕಾಪು: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲತೆ ಕಂಡು ಇದೀಗ ಲಸಿಕೆ ಒದಗಿಸುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಂಗಳವಾರ ಕಾಪು ಶಾಸಕರ ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್ ಹಾಗು ಸಮಾನ ಮನಸ್ಕ ಪಕ್ಷಗಳ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಸಹಬಾಳ್ವೆ ಸಂಘಟನೆ ವತಿಯಿಂದ ನಡೆದ ಜನಾಗ್ರಹ
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಲಸಿಕಾ ಕೇಂದ್ರದಲ್ಲಿಯೂ ರಾಜಕೀಯ ಮೇಳೈಸುತ್ತಿದ್ದು ತಾರತಮ್ಯತೆ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಎಲ್ಲಾ ವಯೋ ವರ್ಗದವರಿಗೂ ಲಸಿಕೆ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬೇಕಾದ ಮೊದಲ ಡೋಸನ್ನೇ ಇನ್ನೂ ಕೂಡ ನೀಡುವಲ್ಲಿ ಅಸಮರ್ಥವಾಗಿದೆ.
ರಾಜ್ಯ ಸರ್ಕಾರವು ಲಾಕ್ಡೌನ್ ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೆಜ್ ಪಡೆಯಲು ವಿಧಿಸಲಾಗಿರುವ ಕಠಿಣ ಷರತ್ತುಗಳು ಮತ್ತು ನಿಯಮಗಳಿಂದಾಗಿ ಅರ್ಹರ ಕೈಸೇರದೆ ಘೋಷಿತ ಪ್ಯಾಕೇಜ್ “ಊಟಕ್ಕಿಲ್ಲದ ಉಪ್ಪಿನ ಕಾಯಿ”ಯಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಖಾಲಿ ಚೀಲವನ್ನು ಸುಟ್ಟು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಉಪ ತಹಶಿಲ್ದಾರ್ ರವಿ ಶಂಕರ್ ಹಾಗು ಆಶೋಕ್ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಬಿ ಶೆಟ್ಟಿ, ಪ್ರಮುಖರಾದ ಜಿತೇಂದ್ರ ಪುಟಾರ್ಡೊ, ನವೀನ್ ಚಂದ್ರ ಜೆ ಶೆಟ್ಟಿ, ಶೌಮ್ಯ ಸಂಜೀವ,ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಪಡುಬಿದ್ರಿ, ಪ್ರಶಾಂತ್ ಜತ್ತನ್ನ,ವಿನಯ ಬಲ್ಲಾಲ್,ಶರ್ಫುದ್ದೀನ್ ಕಾಪು, ಹರೀಶ್ ಶೆಟ್ಟಿ ಪಾಂಗಾಳ, ನವೀನ್ ಎನ್ ಶೆಟ್ಟಿ, ದೀಪಕ್,ಎರ್ಮಾಳ್, ಜೆಡಿಎಸ್ ಮುಖಂಡ ಇಸ್ಮಾಯಿಲ್ ಪಲಿಮಾರ್, ಇಸ್ಮಾಯಿಲ್ ಕನ್ನಂಗಾರ್,ಗಣೇಶ್ ಕೋಟ್ಯಾನ್, ಕೇಶವ ಪಲಿಮಾರ್,ಅನ್ವರ್ ಅಲಿ ಕಾಪು, ಝಹೀರ್ ಬೆಳಪು, ನಾಗೇಶ್ ಕುಮಾರ್ ಶಿರ್ವ, ಮೊದಲಾದವರು ಉಪಸ್ಥಿತರಿದ್ದರು.