ಕಾಪು : ಶ್ರೀ ದುರ್ಗಾ ಸೇವಾ ಸಮಿತಿ ಕುಂಜೂರು ಮತ್ತು ಶ್ರೀ ದುರ್ಗಾ ಮಿತ್ರ ವೃಂದ ಕುಂಜೂರು ಇವರ ಜಂಟಿ ಆಶ್ರಯದಲ್ಲಿ ಈಸ್ಟ್ ವೆಸ್ಟ್ ನರ್ಸರಿ ಪಣಿಯೂರು ಮತ್ತು ವೆಸ್ಟ್ ಕೋಸ್ಟ್ ನರ್ಸರಿ ಮೂಳೂರು ಇವರ ಸಹಯೋಗದೊಂದಿಗೆ ಕುಂಜೂರಿನಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಪಣಿಯೂರು ಈಸ್ಟ್ ವೆಸ್ಟ್ ನರ್ಸರಿಯ ಮಾಲಕ ಎಂ.ಎ. ಮೂಸಾ ಅವರು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಕೆ. ಎಲ್. ಕುಂಡಂತಾಯ ಮಾತನಾಡಿ, ಕುಂಜೂರು ದೇಗುಲದ ಪರಿಸರದಲ್ಲಿ ದೇವಸ್ಥಾನದ ಉಪಯೋಗಕ್ಕಾಗಿ ಬಳಸುವ ಹೂವಿನ ಗಿಡಗಳನ್ನು ಒದಗಿಸುವ ಮೂಲಕ ಈಸ್ಟ್ ವೆಸ್ಟ್ ನರ್ಸರಿ ಮತ್ತು ವೆಸ್ಟ್ ಕೋಸ್ಟ್ ನರ್ಸರಿಯ ಮಾಲಕರಾದ ಎಂ.ಎ. ಮೂಸಾ ಹಾಗೂ ಅನಿಲ್ ಸೋನ್ಸ್ ಅವರು ಸೌಹಾರ್ದತೆಯನ್ನು ಮೆರೆದಿದ್ದಾರೆ. ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ತುಳುನಾಡಿನ ಧಾರ್ಮಿಕ ಕೇಂದ್ರಗಳಲ್ಲಿ ಪರಸ್ಪರ ಸೌಹಾರ್ದ ಮನಸ್ಸುಗಳನ್ನು ಜೋಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಆಶಿಸಿದರು.

ಈ ಸಂದರ್ಭ ಶ್ರೀದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ದೇವರಾಜ ರಾವ್ ನಡಿಮನೆ, ದೇಗುಲದ ಅರ್ಚಕರಾದ ಚಕ್ರಪಾಣಿ ಉಡುಪ, ರಾಮಕೃಷ್ಣ ಉಡುಪ, ರಘುಪತಿ ಉಡುಪ, ಎಲ್ಲೂರು ಗ್ರಾ. ಪಂ. ಸದಸ್ಯ ಯಶವಂತ ಶೆಟ್ಟಿ, ಉದ್ಯಮಿ ಸತೀಶ್ ಕುಂಡಂತಾಯ, ಶ್ರೀ ದುರ್ಗಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ವೈ. ಎಸ್. ಕೋಶಾಧಿಕಾರಿ ಶ್ರೀವತ್ಸ ರಾವ್, ಜೊತೆ ಕಾರ್ಯದರ್ಶಿ ರಾಕೇಶ್ ಕುಂಜೂರು ಹಾಗು ದೇಗುಲದ ಪ್ರಬಂಧಕ ರಾಘವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

