ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕೋಟ್ಟಯಂ ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷರಾದ ಪರಮ ಪೂಜ್ಯ ಬಸೆಲಿಯೋಸ್ ಮಾರ್ ತೋಮ ಪೌಲೋಸ್ || (74) 12ರ ಮುಂಜಾನೆ ಪೆರುಮಲ ಸೈಂಟ್ ಗ್ರಿಗೋರಿಯೋಸ್ ಮೆಡಿಕಲ್ ಮಿಶನ್ ಆಸ್ಪತ್ರೆಯಲ್ಲಿ ನಿಧನರಾದರು.
1946 ಆಗಸ್ಟ್ 30 ರಂದು ಕೇರಳದ ಕುನ್ನಮ್ ಕುಳದಲ್ಲಿ ಜನಿಸಿ, 1985ರಲ್ಲಿ ಬಿಷಪರಾಗಿ ಕುನ್ನಮ್ ಕುಳಂ ಧರ್ಮ ಪ್ರಾಂತ್ಯದ ಪ್ರಥಮ ಬಿಷಪ್ ಆಗಿ, 2010 ನವೆಂಬರ್ 1 ರಂದು ಸಭೆಯ ಪರಮಾಧ್ಯಕ್ಷರಾಗಿದ್ದರು.
ಇವರ ಆಡಳಿತ ಅವಧಿಯಲ್ಲಿ ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಸಭೆಯ ಚರಿತ್ರೆಯಲ್ಲಿ ಸುವರ್ಣ ಯುಗವಾಗಿತ್ತು. ಬ್ರಹ್ಮಾವರ ಕೊಂಕಣಿ ಸಿರಿಯನ್ ಕ್ರಿಸ್ಚಿಯನ್ ವಿಶ್ವಾಸಿಗಳೆಂದರೆ ತುಂಬಾ ಇಷ್ಟ ಪಡುತ್ತಿದ್ದ ಇವರು, ಬ್ರಹ್ಮಾವರವನ್ನು 2010ರಲ್ಲೇ ನೂತನ ಧರ್ಮಪ್ರಾಂತ್ಯವಾಗಿ ಘೋಷಿಸಿದರು.
ಮೂರು ಬಾರಿ ಬ್ರಹ್ಮಾವರಕ್ಕೆ ಭೇಟಿ ನೀಡಿದ ಅವರು 2015ರಲ್ಲಿ ಇಲ್ಲಿನ ಸ್ಥಾಪಕ ಬಿಷಪ್ ಆಲ್ವಾರಿಸ್ ಮಾರ್ ಜೂಲಿಯಸ್ ಮತ್ತು ಪ್ರಥಮ ಧರ್ಮಗುರು ರೋಕ್ ಜೆಫ್ರಿನ್ ನೊರೊನ್ಹಾನವರನ್ನು ಆಶೀರ್ವದಿಸಲ್ಪಟ್ಟವರು” ಎಂದು ಘೋಷಿಸಿದರು. ಕೊಂಕಣಿ ಸಿರಿಯನ್ ಸಮುದಾಯದ ಎಲ್ಲಾ ಇಗರ್ಜಿ ಗಳಿಗೆ ಭೇಟಿ ನೀಡಿ, ಹುಲಿಕಲ್ ನಲ್ಲಿರುವ ಸಂತ ಗ್ರಿಗೋರಿಯೋಸ್ ಇಗರ್ಜಿಯ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದರು. 2018ರಲ್ಲಿ ಬ್ರಹ್ಮಾವರ ಸೈಂಟ್ ಮೇರಿಸ್ ಕೆಥೆಡ್ರಲ್ ನ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿ “ತೀರ್ಥಾಟನ ಕೇಂದ್ರ” ವಾಗಿ ಘೋಷಿಸಿದರು. ಹಾಗೂ 2019 ರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೆಲವು ಸಮಯದಿಂದ ಕ್ಯಾನ್ಸರ್ ಸಂಬಂಧಿಸಿದ ಚಿಕಿತ್ಸೆಯಲ್ಲಿದ್ದರು. ಅವರ ಪಾರ್ಥೀವ ಶರೀರವನ್ನು ಪೆರುಮಲ ಇಗರ್ಜಿ ಯಲ್ಲಿ ಮತ್ತು ಸಭೆಯ ಕೇಂದ್ರ ಸ್ಥಾನವಾದ ಕೋಟ್ಟಯಂ ದೇವಲೋಕ ಕ್ಯಾಥೋಲಿಕೇಟ್ ಅರಮನೆ ಇಗರ್ಜಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ಅಂತ್ಯಕ್ರಿಯೆಯ ಪ್ರಾರ್ಥನೆಗಳು ಸೋಮವಾರ ಸಂಜೆ 3 ರಿಂದ 6 ಘಂಟೆಯ ತನಕ ನಡೆದಿದ್ದು, ಬ್ರಹ್ಮಾವರ ಎಸ್ ಎಂಎಸ್ ಚರ್ಚ ನ ಧರ್ಮಗುರು ಫಾದರ್ ಎಂ. ಸಿ. ಮಥಾಯಿ, ಸಹಾಯಕ ಧರ್ಮಗುರುಗಳು ಮತ್ತು ಓ. ಎಸ್. ಸಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಬಿ.ರಾಡ್ರಿಗಸ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅವರ ಅಗಲುವಿಕೆಗೆ ಕೊಂಕಣಿ ಸಿರಿಯನ್ ಕ್ರಿಸ್ಚಿಯನ್ ಸಮುದಾಯದ ಧರ್ಮಾಧ್ಯಕ್ಷರಾದ ಯಾಕೋಬ್ ಮಾರ್ ಏಲಿಯಾಸ್ ಬಿಷಪರು, ಎಲ್ಲಾ ಧರ್ಮಗುರುಗಳು ಮತ್ತು ವಿಶ್ವಾಸಿ ಸಮೂಹದವರು ತಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ.