ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಬೇಕು ಮತ್ತು ತೇಜೋವಧೆ ಮಾಡುವಂತ ಯಾವೂದೇ ಮಾಧ್ಯಮಕ್ಕೆ ದಂಡ ಹಾಕುವಂತ ವ್ಯವಸ್ಥೆ ಆಗಬೇಕು ಎಂದು ಬಾರಕೂರಿನ ಪ್ರಸಿದ್ದ ಆಲೆಮನೆ ಬೆಲ್ಲ ತಯಾರಿಕಾ ಘಟಕದ ಮುಖ್ಯಸ್ಥ ನಾಗರಮಠ ಗಣೇಶ ಪೂಜಾರಿ ಹೇಳಿದರು. ಅವರು ಬ್ರಹ್ಮಾವರ ಮದರ್ ಪ್ಯಾಲೇಸ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಹಲವಾರು ವರ್ಷದಿಂದ ಕಬ್ಬು ಬೆಳೆದು ಪರಂಪರಾಗತವಾಗಿ ಬೆಲ್ಲ ತಯಾರಿ ಮಾಡಿಕೊಂಡು ಬಂದವರಾಗಿದ್ದು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕೂಡಾ ಕಬ್ಬು ನೀಡುತ್ತಿದ್ದು, ಕಾರ್ಖಾನೆ ನಿಲುಗಡೆಗೊಂಡ ನಂತರ ಅವರದೇ ಮನೆಯ ಬಳಿ ಎಸ್.ವಿ.ಜಿ ಎನ್ನುವ ಬ್ರಾಂಡ್ ನಿಂದ ಡಬ್ಬಿ ಬೆಲ್ಲವನ್ನು ಮಾಡಿ ರಾಜ್ಯದ ನಾನಾ ಭಾಗದಲ್ಲಿ ತಮ್ಮದೆ ಆದ ಮಾರುಕಟ್ಟೆ ಮತ್ತು ಪ್ರಸಿದ್ಧಿಯನ್ನು ಪಡೆದಿದ್ದರು. ಲಾಕ್ ಡೌನ್ ಸಮಯದ ಕೆಲವು ದಿನದ ಹಿಂದೆ ಮೊಬೈಲ್ ಮೂಲಕ ತಮ್ಮ ಕಬ್ಬು ಅರೆಯುವ ಆಲೆಮನೆಯನ್ನು ಸೆರೆಹಿಡಿದು ಜಾಲತಾಣದ ಮೂಲಕ ನಮ್ಮ ಮೇಲೆ ಸಂಸ್ಥೆಗೆ ಅಪಮಾನ ಆಗುವ ರೀತಿಯಲ್ಲಿ ವರದಿ ಮಾಡಿ ಬಿತ್ತರಿಸಿ, ನಮ್ಮ ಬೆಲ್ಲದ ಸಂಸ್ಥೆಗೆ ಕೆಟ್ಟ ಹೆಸರು ಬರುವ ಹಾಗೆ ಮಾಡಿದ್ದಾರೆ. ನಾವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಂತೆ ಬೆಲ್ಲವನ್ನು ತಯಾರು ಮಾಡುತ್ತಿದ್ದು, ಸರಕಾರಿ ಇಲಾಖೆಯ ಎಲ್ಲ ಪರವಾನಗೆ ಪಡೆದು ಕ್ರಮ ಬದ್ದವಾಗಿ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆಯಿಂದ ಹಲವಾರು ದೇವಸ್ಥಾನ, ಔಷಧಿ ತಯಾರಾಗುವ ಸಂಸ್ಥೆಗೆ ಮತ್ತು ಬೆಂಗಳೂರು ಉಡುಪಿ ಮಂಗಳೂರು, ಮುಂಬಯಿಗೆ ಬೆಲ್ಲ ಸರಬರಾಜು ಮಾಡಲಾಗುತ್ತಿದ್ದು, ತೆಜೋವಧೆ ಮಾಡಲಾದ ಜಾಲತಾಣದ ವಿರುದ್ದ ಮಾನಹಾನಿ ಕೇಸು ದಾಖಲಿಸಲಿದ್ದೇವೆ. ನಮ್ಮ ಗ್ರಾಹಕರಿಗೆ ಆದ ತಪ್ಪು ತಿಳಿವಳಿಕೆಯಿಂದ ಹಲವಾರು ಗ್ರಾಹಕರು ಮನನೊಂದಿದ್ದಾರೆ ಎಂದರು. ಪ್ರತಿ ದಿನ ನಾನಾ ಜಿಲ್ಲೆಯಿಂದ ಕಬ್ಬನ್ನು ತರಿಸಿಕೊಂಡು 5 ಕ್ವಿಂಟಾಲ್ ಬೆಲ್ಲ ತಯಾರಿ ಆಗುತ್ತದೆ. ಯಾರೂ ಕೂಡಾ ಮುಕ್ತವಾಗಿ ಆಗಮಿಸಿ ತಯಾರಿಕಾ ವಿಧಾನವನ್ನು ಪರಿಶೀಲಿಸಬಹುದು ಎಂದರು.
ಸಂಸ್ಥೆಯ ಶೈಲಜಾ, ಶಿಲ್ಪ, ರಾಜು ಪೂಜಾರಿ ಉಪಸ್ಥಿತರಿದ್ದರು.