ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಮಂದಾರ್ತಿ ಮತ್ತು ಕೂರಾಡಿ ಬಂಡೀಮಠ ಬಾರಕೂರು ಸಂಪರ್ಕ ರಸ್ತೆ ನಡುವೆ ನಡೂರಿನ ಕಿರು ಬದಲಿ ಸೇತುವೆ ತುಂಡಾಗಿ ಸಂಚಾರಕ್ಕೆ ತಡೆಯಾಗಿದೆ.
ಬಾರಕೂರು ಮೂಲಕ ನಡೂರು ಮಂದಾರ್ತಿಗೆ ಕೇವಲ 6 ಕಿಮಿ ನಲ್ಲಿ ಹೋಗಬಹುದಾದ ಹತ್ತಿರದ ಸಂಪರ್ಕ ರಸ್ತೆಯಲ್ಲಿ ನಡೂರು ಬಳಿಯಲ್ಲಿ ಎರಡು ಭಾಗದಿಂದ ಹರಿದು ಬರುವ ನೀರಿನ ಬೃಹತ್ ತೋಡೊಂದಕ್ಕೆ ಕಿರು ಸೇತುವೆ ಮಾಡುವ ಸಾರ್ವಜನಿಕರ ಬೇಡಿಕೆ ಈ ತನಕ ಈಡೇರಲೇ ಇಲ್ಲ.
ಪರಿಸರದ ಜನರೇ ಅಡಕೆ ಮರ ಮತ್ತು ಬಿದಿರು ಹಾಕಿ ದಾಟುತ್ತಿದ್ದ ಇಲ್ಲಿನ ಜನರಿಗೆ ಕೆಲ ವರ್ಷದ ಹಿಂದೆ ಚಿಕ್ಕ ಸಂಕವನ್ನು ಮಾಡಿ ಲಘು ವಾಹನ ಸಂಚಾರಕ್ಕೆ ಅನುಕೂಲವಾಗುತ್ತಿತ್ತು.
ಕಳೆದ ವರ್ಷ ಇದೇ ಅವಧಿಯಲ್ಲಿ ಕೊಚ್ಚಿ ಹೋದ ಸಂಕದಿಂದ ಇಲ್ಲಿನ ಸಂಪರ್ಕ ಕಡಿತಗೊಂಡು ಶಾಲಾ ಮಕ್ಕಳು ಹಾಲು ಉತ್ಪಾದಕರು ಕೃಷಿಕರು ಮಂದಾರ್ತಿ ಹೋಗಲು ರಂಗನಕೆರೆ ಮೂಲಕ 16 ಕಿಮೀ ಸುತ್ತು ಬಳಸಿ ಹೋಗಬೇಕಾಗಿತ್ತು .
ಕಳೆದ ವರ್ಷ ಕೊಚ್ಚಿ ಹೋದ ತಾತ್ಕಾಲಿಕ ಸಂಕಕ್ಕೆ ಗ್ರಾಮ ಪಂಚಾಯತಿ ಮತ್ತು ಸಾರ್ವಜನಿಕರು ಸೇರಿ ಸಿಮೆಂಟ್ ಪೈಪ್ ಅಳವಡಿಸಿ ಮೇಲೆ ಮಣ್ಣು ಹಾಕಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು.
ಈ ಸಂಪರ್ಕ ವ್ಯವಸ್ಥೆ ಮಳೆಗಾಲದಲ್ಲಿ ಮತ್ತೆ ಕಡಿತವಾಗಲಿದೆ ಎಂಬುದು ಅದಾಗಲೇ ಮನವರಿಕೆ ಆಗಿತ್ತು. ಅಂತೆಯೇ ಕೆಲ ದಿನದಿಂದ ಸುರಿದ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ. ಇದರಿಂದ ಮತ್ತೆ ಜನರಿಗೆ ಸಂಚಾರಕ್ಕೆ ತಡೆಯಾಗಿದ್ದು ಕೂಡಲೇ ಇಲ್ಲಿಗೆ ಕಿರು ಸೇತುವೆಯನ್ನು ಸಬಂಧಪಟ್ಟ ಇಲಾಖೆ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.