ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಶ್ರೀ ವಾದಿರಾಜ ಗುರು ಸಾರ್ವಭೌಮರ ಜನ್ಮಸ್ಥಳವಾದ ಕುಂದಾಪುರ ಸಮೀಪದ ಹೂವಿನಕೆರೆಯ ಸೋದೆ ಶ್ರೀ ವಾದಿರಾಜ ಮಠದ 116 ಎಕ್ರೆ ಜಮೀನಿನಲ್ಲಿ ಸೋದೆ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಒಂದು ವಿಭಿನ್ನ ಸಂಕಲ್ಪವನ್ನು ಹೊತ್ತು ವೃಕ್ಷ ಸಂಕುಲವನ್ನೇ ಬೆಳೆಸಲು ಮುಂದಾಗಿದ್ದಾರೆ. ಈ ಪ್ರದೇಶದಲ್ಲಿ ಶ್ರೀಗಂಧ ಹಾಗೂ ಸಾಗವಾನಿ ವೃಕ್ಷವನ್ನು ಬೆಳೆಸುವುದರೊಂದಿಗೆ ಅನೇಕ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ನಾನಾ ಬಗೆಯ ಹಣ್ಣಿನ ಗಿಡ – ಮರಗಳು, ಪರಿಸರಕ್ಕೆ ಶುದ್ಧ ಆಮ್ಲಜನಕ ನೀಡುವ ವೃಕ್ಷಗಳು, ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಿಸಿದ ಔಷಧೀಯ ಗುಣವುಳ್ಳ ಮರಗಳನ್ನು ಹಾಗೂ ಭೂಮಿಯ ಅಂತರ್ಜಲ ಮಟ್ಟ ವೃದ್ಧಿಸಲು ಜಮೀನಿನ ಸುತ್ತಲೂ 5 ಅಡಿ ಆಳದ ತೋಡು ಮತ್ತು ಜಮೀನಿನ ಒಳಭಾಗದಲ್ಲಿ ಇಂಗುಗುಂಡಿ ಸಹಿತ ಹಿರಿದಾದ 1 ಮದಗವನ್ನು ನಿರ್ಮಿಸಲು ಆದೇಶಿಸಿದ್ದಾರೆ. ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಎಂಬ ಕರೆಗೆ ಪುಷ್ಟಿಕೊಡುವಂತೆ ಅಕ್ಷಯ ಶೆಟ್ಟಿ ಮತ್ತು ಸುಷ್ಮಾ ರಾವ್ ವಿದೇಶದಲ್ಲಿ ತಾವು ನಿರ್ವಹಿಸುತ್ತಿದ್ದ ವೃತ್ತಿಯನ್ನು ತ್ಯಜಿಸಿ ತಮ್ಮ ಹುಟ್ಟೂರಿನಲ್ಲಿ ಸಾಧನೆ ಮಾಡುವ ಹುಮ್ಮಸ್ಸಿನಿಂದ “ಹಸಿರುನಾಡು” ಎಂಬ ಸಂಸ್ಥೆಯನ್ನು ಆರಂಭಿಸಿ ಈ ಯೋಜನೆಯ ಮೇಲ್ವಿಚಾರಣೆ ಹೊಣೆಯನ್ನು ಹೊತ್ತಿದ್ದಾರೆ.
ಈ ಯೋಜನೆಯ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವು ಗುರುವಾರ ಶ್ರೀಪಾದರಿಂದ ನೆರವೇರಲ್ಪಟ್ಟಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಈ ಯೋಜನೆಯು ತಮಗೂ ಹಾಗೂ ಸ್ಥಳೀಯರಿಗೂ ಹೆಮ್ಮೆ ತಂದು ಕೊಡುವ ವಿಷಯವಾಗಿದೆ. ಇದರಿಂದಾಗಿ ಪರಿಸರದಲ್ಲಿ ಅನೇಕ ಧನಾತ್ಮಕ ವ್ಯತ್ಯಾಸ ಕಂಡು ಬರುವಲ್ಲಿ ಸಂಶಯವಿಲ್ಲ. ಅದಲ್ಲದೇ ಗುರುಗಳ ಈ ವಿಶೇಷ ಕಾರ್ಯಕ್ಕೆ ಭಾವಪ್ರಚೋದಕನಾದ ತಾನು ಸದಾ ಈ ಯೋಜನೆ ಕುರಿತು ಸಹಾಯ ಮತ್ತು ಮಾರ್ಗಸೂಚನೆ ನೀಡುವಲ್ಲಿ ಬದ್ಧನಾಗಿರುವೆ ಎಂದರು.
ಸಹಾಯಕ ಕಮಿಷನರ್ ಕೆ.ರಾಜು ಅವರು ಈ ಯೋಜನೆ ಕುರಿತು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭ ಸೋದೆ ಮಠದ ದಿವಾನರಾದ ಶ್ರೀ ಪಾಡಿಗಾರು ಶ್ರೀನಿವಾಸ ತಂತ್ರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಉಪಸ್ಥಿತರಿದ್ದರು. ರತ್ನಕುಮಾರ್ ಕಾರ್ಯಕ್ರಮ ನಿರೂಪಿಸಿದರು.