ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : “ಸ್ವಚ್ಛ ಹಂದಟ್ಟುವಿನತ್ತ ನಮ್ಮ ಚಿತ್ತ” ಎನ್ನುವ ಧ್ಯೇಯದ ಅಡಿಯಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು ಮತ್ತು ಪೂಜಾ ಹಂದಟ್ಟು ಇವರ ನೇತೃತ್ವದಲ್ಲಿ ಹಂದಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಂತ ಹುಲ್ಲನ್ನು ಕಟಾವು ಮಾಡುವುದರ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಬಳಿಕ ಹಸಿಹುಲ್ಲನ್ನು ನ ಗೋವಿಗಾಗಿ ಮೇವು ಅಭಿಯಾನಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಕೋಟ ಶಿವರಾಮಕಾರಂತರಂತಹ ವಿಶ್ವ ಶ್ರೇಷ್ಠ ಸಾಹಿತಿಗಳನ್ನು, ಕೋಟ ಶ್ರೀನಿವಾಸ ಪೂಜಾರಿಯವರಂತಹ ನಾಯರನ್ನು ದೇಶಕ್ಕೆ ಕೊಟ್ಟ ಕೋಟದ ಪುಣ್ಯ ಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಪರಿಕಲ್ಪನೆಯೊಂದಿಗೆ ಗೋಮಾತೆಯ ಸೇವೆ ಮಾಡಿರುವ ಯುವ ಸಂಘಟನೆಗಳ ಕಾರ್ಯ ರಾಜ್ಯಕ್ಕೆ ಮಾದರಿ ಎಂದರು.
ಗೋವಿಗಾಗಿ ಮೇವು ಅಭಿಯಾನದ ಕೋಟ ವಲಯಾಧ್ಯಕ್ಷ ಪ್ರದೀಪ್ ಪೂಜಾರಿ, ಸಾಮಾಜಿಕ ಜಾಲತಾಣ ಸಂಚಾಲಕ ಪ್ರದೀಪ್ ಪಡುಕೆರೆ, ಮಹಿಳಾ ಅದ್ಯಕ್ಷೆ ವಿದ್ಯಾ ಸಾಲ್ಯಾನ್, ಪಾಂಚ ಜನ್ಯದ,ಕ್ರಷ್ಣಮೂರ್ತಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಗ್ರಾಮಪಂಚಾಯತ್ ಕೋಟತಟ್ಟು, ಗೆಳೆಯರ ಬಳಗ ಯುವಕಸಂಘ ದಾನುಗುಂದು,ಅಭಿಯಾನ್ ಪ್ರೆಂಡ್ಸ್ ನಾಗಬನ ಹಂದಟ್ಟು,ಪಾಂಚಜನ್ಯ ಸಂಘ ಪಾರಂಪಳ್ಳಿ, ಮಹಿಳಾ ಸಂಘ ಹಂದಟ್ಟು, ಓಂ ಸ್ಟಾರ್ ಪ್ರೆಂಡ್ಸ್ ಗೊಬ್ನರ ಬೆಟ್ಟು, ನಿಸ್ವಾರ್ಥ್ ಸೇವಾ ಟ್ರಸ್ (ರಿ) ಕೋಟ, ಕಟ್ಟೆ ಗೆಳೆಯರು ಹಂದೆ ದೇವಸ್ಥಾನ ಹಂದಟ್ಟು ಮುಂತಾದ ಸಂಘಟನೆಗಳು ಭಾಗವಹಿಸಿದ್ದವು.